ನವದೆಹಲಿ: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ಗೆ ಜಾಮೀನು ನಿರಾಕರಿಸಿರುವ ಸುಪ್ರೀಂ ಕೋರ್ಟ್, 60 ಪ್ರಮುಖ ಸಾಕ್ಷಿಗಳ ವಿಚಾರಣೆಯನ್ನು ಒಂದು ವರ್ಷ ದೊಳಗೆ ಮುಗಿಸ ಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ಶುಕ್ರವಾರ ನಿರ್ದೇಶನ ನೀಡಿದೆ.
ದರ್ಶನ್ ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ವಿಜಯ್ ಬಿಷ್ಣೋಯ್ ಅವರ ಪೀಠವು, ವಿಚಾರಣಾ ನ್ಯಾಯಾಲಯ ದಿನನಿತ್ಯ ಸಾಕ್ಷಿಗಳ ವಿಚಾರಣೆ ನಡೆಸಿ ಒಂದು ವರ್ಷದೊಳಗೆ ವಿಚಾರಣೆ ಪೂರ್ಣಗೊಳಿಸಬೇಕು. ಬಳಿಕ ದರ್ಶನ್ ಅವರು ಮತ್ತೊಮ್ಮೆ ಜಾಮೀನಿಗಾಗಿ ಅರ್ಜಿ ಸಲ್ಲಿಸಬಹುದು ಎಂದು ಸೂಚನೆ ನೀಡಿದೆ. ದರ್ಶನ್ ಹಾಗೂ ಇತರ ಆರೋಪಿಗಳ ಜಾಮೀನನ್ನು ನ್ಯಾಯಪೀಠ 2025ರ ಆಗಸ್ಟ್ 14ರಂದು ರದ್ದುಗೊಳಿಸಿತ್ತು.
ನ್ಯಾಯಪೀಠದ ನಿರ್ದೇಶನವೇನು?
ತ್ವರಿತವಾಗಿ ವಿಚಾರಣೆ ನಡೆಯಬೇಕು. ಇಲ್ಲದಿದ್ದಲ್ಲಿ, ಒಂದು ವರ್ಷದ ನಂತರ ಜಾಮೀನು ಅರ್ಜಿಯನ್ನು ಪರಿಗಣನೆ ಮಾಡಲಾಗುತ್ತದೆ
ವಿಚಾರಣಾ ನ್ಯಾಯಾಲಯದ ವರದಿ ಪ್ರಕಾರ, 2025ರ ನವೆಂಬರ್ 3ರಂದು ದೋಷಾರೋಪಗಳನ್ನು ಪಟ್ಟಿ ಮಾಡಲಾಗಿದೆ. ಆದರೆ, ಕಳೆದ ಏಳು ತಿಂಗಳಲ್ಲಿ ಪ್ರಾಸಿಕ್ಯೂಷನ್ ಕೇವಲ 10 ಸಾಕ್ಷಿಗಳನ್ನು ವಿಚಾರಣೆ ಮಾಡಿದ್ದು, ಇನ್ನೂ 60 ಪ್ರಮುಖ ಸಾಕ್ಷಿಗಳ ವಿಚಾರಣೆ ನಡೆಸಬೇಕಿದೆ. ದೋಷಾರೋಪ ಪಟ್ಟಿಯಲ್ಲಿ 272 ಸಾಕ್ಷಿಗಳ ಹೆಸರಿದೆ. ಇದರಲ್ಲಿ 150 ಸಾಕ್ಷಿಗಳ ವಿಚಾರಣೆ ನಡೆಸಲು ಪ್ರಾಸಿಕ್ಯೂಷನ್ ಒಲವು ತೋರಿದೆ. ವಿಚಾರಣೆ ತುಂಬಾ ನಿಧಾನವಾಗಿ ನಡೆಯುತ್ತಿದ್ದು, ಇದೇ ವೇಗದಲ್ಲಿ ವಿಚಾರಣೆ ನಡೆದಲ್ಲಿ ದೀರ್ಘ ಕಾಲ ತೆಗೆದುಕೊಳ್ಳಲಿದೆ. ಆದ್ದರಿಂದ ಅಧೀನ ನ್ಯಾಯಾಲಯ ಪ್ರತಿದಿನ ವಿಚಾರಣೆ ನಡೆಸಬೇಕು. ಅನಗತ್ಯ ಕಾರಣಗಳಿಗೆ ವಿಚಾರಣೆ ಮುಂದೂಡಬಾರದು. ವಿಚಾರಣೆ ತ್ವರಿತಗತಿಯಲ್ಲಿ ನಡೆಯಲು ಪ್ರತಿವಾದಿಗಳು ಸಹಕಾರ ನೀಡಬೇಕು