ಮಂಗಳೂರು:ಸಮಾಜದ ಸ್ವಾಸ್ಥ್ಯ ಕಾಪಾಡುವ ಮಹತ್ವದ ಜವಾಬ್ದಾರಿಯನ್ನು ಪತ್ರಕರ್ತರು ನಿಭಾಯಿಸುತ್ತಿದ್ದಾರೆ. ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವ ಪತ್ರಕರ್ತರನ್ನು ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.ನಗರದ ರೆಡ್ ಕ್ರಾಸ್ ಶತಮಾನೋತ್ಸವ ಕಟ್ಟಡದ ಪ್ರೇರಣಾ ಸಭಾಂಗಣದಲ್ಲಿ ಭಾನುವಾರ ನಡೆದ ಮಂಗಳೂರು ಪ್ರೆಸ್ ಕ್ಲಬ್ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸರಿಗಿಂತ ವೇಗವಾಗಿ ಘಟನಾ ಸ್ಥಳಗಳಿಗೆ ತೆರಳಿ ಸಮಾಜಕ್ಕೆ ತಪ್ಪು ಸಂದೇಶ ಹೋಗದಂತೆ ವಿವೇಚನೆಯಿಂದ ವರದಿ ಮಾಡುವ ಪತ್ರಕರ್ತರ ಬದ್ಧತೆ ಶ್ಲಾಘನೀಯ ಎಂದರು.ಸಮಾಜ ಸೇವಕ, ರಾಜಕೇಸರಿ ಟ್ರಸ್ಟ್ನ ಸಂಸ್ಥಾಪಕ ದೀಪಕ್ ಜಿ.
ಬೆಳ್ತಂಗಡಿ ಅವರಿಗೆ 2026ನೇ ಸಾಲಿನ ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರದಾನ ಮಾಡಿದ ಮಂಗಳೂರು ನಗರ ಉಪ ಪೊಲೀಸ್ ಆಯುಕ್ತ ಎಚ್.ಎನ್. ಮಿಥುನ್ ಮಾತನಾಡಿ, ಮಂಗಳೂರಿನ ಪತ್ರಕರ್ತರು ಸಂಯಮ ಮತ್ತು ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡುತ್ತಿದ್ದಾರೆ. ನಿಸ್ವಾರ್ಥ ಸೇವಕರನ್ನು ಗುರುತಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ ಎಂದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಯು. ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ರೆಡ್ಕ್ರಾಸ್ ಸೊಸೈಟಿ ದ.ಕ. ಜಿಲ್ಲಾ ಘಟಕದ ಚೇರ್ಮನ್ ಸಿ.ಎ. ಶಾಂತಾರಾಮ ಶೆಟ್ಟಿ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿದರು. ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎ. ಖಾದರ್ ಶಾ ಅವರು ಪ್ರೆಸ್ ಕ್ಲಬ್ ಗೌರವ ಸನ್ಮಾನಕ್ಕೆ ಆಯ್ಕೆಯಾದವರನ್ನು ಗೌರವಿಸಿದರು. ಪ್ರೆಸ್ ಕ್ಲಬ್ ಗೌರವ ಸನ್ಮಾನ ಪ್ರೆಸ್ ಕ್ಲಬ್ ಗೌರವ ಸನ್ಮಾನಕ್ಕೆ ಆಯ್ಕೆಯಾದ ಬಾಲಸುಬ್ರಹ್ಮಣ್ಯ ಕಂಜಾರ್ರು, ರಾಮಣ್ಣ ವೈ., ಹರ್ಷ, ರೇಮಂಡ್ ಡಿ’ಕುನ್ಹಾ ಮತ್ತು ಆರ್.ಎಮ್. ರಾಜೇಂದ್ರನ್ ಅವರುಗಳನ್ನು ಗೌರವಿಸಲಾಯಿತು. ಮಾಧ್ಯಮ ಅಕಾಡೆಮಿ ವಿಶೇಷ ಪ್ರಶಸ್ತಿ ಪುರಸ್ಕೃತ ಆನಂದ್ ಶೆಟ್ಟಿ, ಕೆಡಬ್ಲ್ಯುಜೆಎ ಪ್ರಶಸ್ತಿ ಪುರಸ್ಕೃತ ರಾಮಕೃಷ್ಣ ಆರ್., ರಾಜೇಶ್ ಶೆಟ್ಟಿ ದೂತ, ಅಬ್ದುಲ್ ರಹೀಮಾನ್ ಟಿ., ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸತೀಶ್ ಇರಾ, ರಾಜೇಶ್ ಶೆಟ್ಟಿ ದಡ್ಡಂಗಡಿ, ಎ.ಕೆ. ಕುಕ್ಕಿಲ, ಸುಳ್ಯ ತಾಲೂಕು ಕಸಾಪ ಪ್ರಶಸ್ತಿ ಪುರಸ್ಕೃತ ಹರೀಶ್ ಮೋಟುಕಾನ ಅವರುಗಳನ್ನು ಸನ್ಮಾನಿಸಲಾಯಿತು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ಪ್ರಧಾನ ಕಾರ್ಯದರ್ಶಿ ರಾಜೇಶ್ ಕೆ. ಪೂಜಾರಿ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಆನಂದ್ ಮಂಗಳೂರು, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ಉಪಸ್ಥಿತರಿದ್ದರು. ಮುಹಮ್ಮದ್ ಆರಿಫ್ ಪಡುಬಿದ್ರಿ, ಆತ್ಮಭೂಷಣ್ ಭಟ್, ವಿಲ್ಫ್ರೆಡ್ ಡಿಸೋಜ, ದಯಾ ಕುಕ್ಕಾಜೆ, ವಿಜಯ ಕೋಟ್ಯಾನ್ ಪಡು ಅವರು ಸನ್ಮಾನಿತರನ್ನು ಪರಿಚಯಿಸಿದರು. ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಲೋಕೇಶ್ ರೈ ಕಾರ್ಯಕ್ರಮ ನಿರೂಪಿಸಿದರು.